ಲೂಕ 24:13-35
Kannada Holy Bible: Easy-to-Read Version
ಎಮ್ಮಾಹುವಿನ ದಾರಿಯಲ್ಲಿ
(ಮಾರ್ಕ 16:12-13)
13 ಅದೇ ದಿನ ಯೇಸುವಿನ ಶಿಷ್ಯರಲ್ಲಿ ಇಬ್ಬರು ಎಮ್ಮಾಹು ಎಂಬ ಪಟ್ಟಣಕ್ಕೆ ಹೋಗುತ್ತಿದ್ದರು. ಅದು ಜೆರುಸಲೇಮಿನಿಂದ ಏಳು ಮೈಲಿ ದೂರದಲ್ಲಿತ್ತು. 14 ನಡೆದ ಪ್ರತಿಯೊಂದು ಸಂಗತಿಯ ಕುರಿತು ಅವರು ಮಾತಾಡುತ್ತಿದ್ದರು. 15 ಆಗ ಯೇಸು ತಾನೇ ಅವರ ಹತ್ತಿರಕ್ಕೆ ಬಂದು, ಅವರ ಜೊತೆಯಲ್ಲಿ ಹೋದನು. 16 (ಆದರೆ ಅವರಿಗೆ ಆತನ ಗುರುತು ಸಿಕ್ಕಲಿಲ್ಲ.) 17 ಯೇಸು ಅವರಿಗೆ, “ನೀವು ಯಾವ ಸಂಗತಿಗಳ ಬಗ್ಗೆ ಮಾತಾಡುತ್ತಿದ್ದೀರಿ?” ಎಂದು ಕೇಳಿದನು.
ಅವರಿಬ್ಬರು ಅಲ್ಲೇ ನಿಂತರು. ಅವರ ಮುಖಗಳು ಬಹಳ ದುಃಖದಿಂದ ತುಂಬಿಹೋಗಿದ್ದವು. 18 ಅವರಲ್ಲಿ ಕ್ಲೆಯೋಫನೆಂಬುವನು, “ಇತ್ತೀಚೆಗೆ ಜೆರುಸಲೇಮಿನಲ್ಲಿ ನಡೆದ ಸಂಗತಿಯನ್ನು ತಿಳಿಯದಿರುವ ವ್ಯಕ್ತಿ ಎಂದರೆ ನೀನೊಬ್ಬನೇ ಇರಬೇಕು” ಎಂದು ಉತ್ತರಿಸಿದನು.
19 ಯೇಸು ಅವರಿಗೆ, “ನೀವು ಯಾವುದರ ಬಗ್ಗೆ ಮಾತಾಡುತ್ತಿದ್ದೀರಿ?” ಎಂದು ಕೇಳಿದನು.
ಅವರು ಆತನಿಗೆ, “ನಜರೇತಿನ ಯೇಸುವಿನ ಬಗ್ಗೆ. ಆತನು ದೇವರ ಮತ್ತು ಮನುಷ್ಯರ ದೃಷ್ಟಿಯಲ್ಲಿ ಮಹಾಪ್ರವಾದಿಯಾಗಿದ್ದನು. ಆತನು ಅನೇಕ ಸಂಗತಿಗಳನ್ನು ಹೇಳಿದನು ಮತ್ತು ಅದ್ಭುತಕಾರ್ಯಗಳನ್ನು ಮಾಡಿದನು. 20 ನಮ್ಮ ನಾಯಕರು ಮತ್ತು ಮಹಾಯಾಜಕರು ಆತನಿಗೆ ಮರಣದಂಡನೆ ವಿಧಿಸಲು ಒಪ್ಪಿಸಿಕೊಟ್ಟು ಶಿಲುಬೆಗೆ ಜಡಿಸಿದರು. 21 ಯೇಸುವೇ ಇಸ್ರೇಲ್ ಜನರನ್ನು (ಯೆಹೂದ್ಯರನ್ನು) ಬಿಡಿಸುತ್ತಾನೆಂದು ನಾವು ನಿರೀಕ್ಷಿಸಿಕೊಂಡಿದ್ದೆವು. ಆದರೆ ಇದೆಲ್ಲಾ ನಡೆದುಹೋಯಿತು.
“ಈಗ ಮತ್ತೊಂದು ಸಂಗತಿಯಾಗಿದೆ. ಈಗಾಗಲೇ ಆತನು ಸತ್ತು ಮೂರು ದಿನಗಳಾದವು. 22 ಇಂದು ನಮ್ಮ ಕೆಲವು ಸ್ತ್ರೀಯರು ಆಶ್ಚರ್ಯಕರವಾದ ಸಂಗತಿಗಳನ್ನು ಹೇಳಿದರು. ಮುಂಜಾನೆ ಬೆಳಗಾಗುವಾಗ, ಯೇಸುವಿನ ದೇಹವನ್ನು ಇಟ್ಟಿದ್ದ ಸಮಾಧಿಯ ಬಳಿಗೆ ಆ ಸ್ತ್ರೀಯರು ಹೋಗಿದ್ದರು. 23 ಆದರೆ ಅವರು ಆತನ ದೇಹವನ್ನು ಅಲ್ಲಿ ಕಾಣಲಿಲ್ಲ. ಆ ಸ್ತ್ರೀಯರು ಹಿಂತಿರುಗಿ ಬಂದು ತಮಗೆ ದೇವದೂತರಿಬ್ಬರ ದರ್ಶನವಾಯಿತೆಂದೂ ಯೇಸು ಬದುಕಿದ್ದಾನೆಂದೂ ತಮಗೆ ಇದನ್ನು ದೇವದೂತರೇ ತಿಳಿಸಿದರೆಂದೂ ನಮಗೆ ಹೇಳಿದರು. 24 ಆದ್ದರಿಂದ ನಮ್ಮ ಗುಂಪಿನಲ್ಲಿದ್ದ ಕೆಲವರು ಸಹ ಸಮಾಧಿಯ ಬಳಿಗೆ ಹೋದರು. ಸ್ತ್ರೀಯರು ಹೇಳಿದ ಹಾಗೆಯೇ ಸಮಾಧಿಯು ಬರಿದಾಗಿತ್ತು. ನಾವು ಸುತ್ತಮುತ್ತ ನೋಡಿದೆವು. ಆದರೆ ನಮ್ಮಲ್ಲಿ ಯಾರಿಗೂ ಆತನು (ಯೇಸು) ಕಾಣಲಿಲ್ಲ” ಎಂದು ಹೇಳಿದರು.
25 ಆಗ ಯೇಸು ಅವರಿಗೆ, “ನೀವು ಬುದ್ಧಿಹೀನರು ಮತ್ತು ಸತ್ಯವನ್ನು ಗ್ರಹಿಸುವುದರಲ್ಲಿ ಮಂದಗತಿಗಳು! ಪ್ರವಾದಿಗಳು ಹೇಳಿದ ಪ್ರತಿಯೊಂದನ್ನೂ ನೀವು ನಂಬಬೇಕು. 26 ಕ್ರಿಸ್ತನು ತನ್ನ ಮಹಿಮೆಯನ್ನು ಪ್ರವೇಶಿಸುವ ಮೊದಲು ಇಂಥ ಶ್ರಮೆಗಳನ್ನು ಅನುಭವಿಸಬೇಕು ಎಂದು ಪ್ರವಾದಿಗಳು ಹೇಳಿದ್ದಾರೆ” ಅಂದನು. 27 ಬಳಿಕ ಯೇಸು ತನ್ನ ಬಗ್ಗೆ ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರತಿಯೊಂದನ್ನೂ ವಿವರಿಸತೊಡಗಿದನು. ಯೇಸುವು ಮೋಶೆಯ ಗ್ರಂಥಗಳಿಂದ ಪ್ರಾರಂಭಿಸಿ ಪ್ರವಾದಿಗಳು ತನ್ನ ಬಗ್ಗೆ ಹೇಳಿದ ವಿಷಯಗಳ ಕುರಿತು ವಿವರಿಸಿದನು.
28 ಅವರು ಎಮ್ಮಾಹು ಊರಿನ ಹತ್ತಿರಕ್ಕೆ ಬಂದಾಗ ಆತನು ತಾನು ಅಲ್ಲಿ ಇಳಿದುಕೊಳ್ಳದವನಂತೆ ನಟಿಸಿದನು. 29 ಆದರೆ ಅವರು ಆತನಿಗೆ, “ಈಗ ಹೊತ್ತಾಯಿತು, ರಾತ್ರಿಯಾಗುತ್ತಾ ಬಂದಿದೆ. ನಮ್ಮೊಂದಿಗೆ ಇರು” ಎಂದು ಬೇಡಿಕೊಂಡರು. ಆದ್ದರಿಂದ ಆತನು ಅವರೊಂದಿಗಿರಲು ಊರೊಳಗೆ ಹೋದನು.
30 ಯೇಸು ಅವರ ಸಂಗಡ ಕುಳಿತುಕೊಂಡು ಸ್ವಲ್ಪ ರೊಟ್ಟಿಯನ್ನು ತೆಗೆದುಕೊಂಡನು. ಆತನು ಆಹಾರಕ್ಕಾಗಿ ದೇವರಿಗೆ ಸೋತ್ರಮಾಡಿ ಅದನ್ನು ಮುರಿದು ಅವರಿಗೆ ಕೊಟ್ಟನು. 31 ಆಗ ಅವರು ಯೇಸುವನ್ನು ಗುರುತಿಸಿದರು. ಆದರೆ ಆತನೇ ಯೇಸುವೆಂದು ಅವರು ತಿಳಿದಾಕ್ಷಣವೇ ಆತನು ಅವರ ಕಣ್ಣಿಗೆ ಮಾಯವಾದನು. 32 ಅವರಿಬ್ಬರು, “ಯೇಸು ದಾರಿಯಲ್ಲಿ ನಮ್ಮ ಸಂಗಡ ಮಾತಾಡಿದಾಗ ನಮ್ಮಲ್ಲಿ ಬೆಂಕಿ ಉರಿದಂತಾಯಿತಲ್ಲವೇ? ಪವಿತ್ರ ಗ್ರಂಥದ ನಿಜ ಅರ್ಥವನ್ನು ಆತನು ವಿವರಿಸಿದಾಗ, ಬಹಳ ರೋಮಾಂಚಕಾರಿಯಾಗಿರಲಿಲ್ಲವೇ?” ಎಂದು ಮಾತಾಡಿಕೊಂಡರು.
33 ಆ ಕೂಡಲೇ ಅವರಿಬ್ಬರೂ ಎದ್ದು ಜೆರುಸಲೇಮಿಗೆ ಹಿಂತಿರುಗಿ ಹೋದರು. ಜೆರುಲೇಮಿನಲ್ಲಿ ಯೇಸುವಿನ ಶಿಷ್ಯರು ಒಟ್ಟಾಗಿ ಸೇರಿಬಂದಿದ್ದರು. ಹನ್ನೊಂದು ಮಂದಿ ಅಪೊಸ್ತಲರು ಮತ್ತು ಅವರ ಸಂಗಡ ಇದ್ದ ಆ ಜನರು, 34 “ಪ್ರಭುವು (ಯೇಸು) ಸತ್ತವರೊಳಗಿಂದ ನಿಜವಾಗಿ ಎದ್ದಿದ್ದಾನೆ! ಆತನು ಸೀಮೋನನಿಗೆ (ಪೇತ್ರ) ಕಾಣಿಸಿಕೊಂಡನು” ಎಂದು ಹೇಳಿದರು.
35 ಆಗ ಆ ಇಬ್ಬರು ದಾರಿಯಲ್ಲಿ ನಡೆದ ಸಂಗತಿಗಳನ್ನು ತಿಳಿಸಿದರು. ಆತನು ರೊಟ್ಟಿ ಮುರಿದಾಗ ತಾವು ಆತನನ್ನು ಗುರುತಿಸಿದ್ದಾಗಿ ಅವರು ಹೇಳಿದರು.
Read full chapterKannada Holy Bible: Easy-to-Read Version. All rights reserved. © 1997 Bible League International